ಚೌಡೇಶ್ವರಿ ಸಿನಿ ಚಿತ್ರಾಲಯ ಲಾಂಛನದಲ್ಲಿ ಚೌಡರೆಡ್ಡಿ(ಬಾಗೇಪಲ್ಲಿ) ಅವರು ನಿರ್ಮಿಸುತ್ತಿರುವ ‘೨೪ ಕ್ಯಾರೆಟ್‘ ದಸಾರಾ ಶುಭ ಸಂದರ್ಭದಲ್ಲಿ ಆರಂಭವಾಯಿತು. ಮತ್ತಿಕೆರೆಯ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಪಿ.ಶಿವಾರೆಡ್ಡಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಪ್ರಥಮ ಸನ್ನಿವೇಶಕ್ಕೆ ಲಹರಿ ವೇಲು ಆರಂಭಫಲಕ ತೋರಿದರು. ಲಾವಣ್ಯ, ಕಾರ್ತಿಕ್ರೆಡ್ಡಿ ಹಾಗೂ ಅನಿತ ಜೊತೆಯಾಗಿ ಕ್ಯಾಮೆರಾ ಚಾಲನೆ ಮಾಡಿದರು. ಖ್ಯಾತ ಸಂಭಾಷಣೆಕಾರ ಹಾಗೂ ನಿರ್ದೇಶಕ ಎಂ.ಎಸ್.ರಮೇಶ್ ಮೊದಲ ಸನ್ನಿವೇಶವನ್ನು ನಿರ್ದೇಶಿಸಿದರು.
‘ತುಂಬಿದ ಮನೆ‘ ಸೇರಿದಂತೆ ಹಿಂದೆ ಸಾಕಷ್ಟು ಯಶಸ್ವಿ ಚತ್ರಗಳನ್ನು ನಿರ್ದೇಶಿಸಿರುವ ಎಸ್.ಉಮೇಶ್ ಈ ಚಿತ್ರದ ನಿರ್ದೇಶಕರು. ಉಮೇಶ್ ಅವರು ವಿಜಯ ಚಂಡೂರ್ ಅವರೊಟ್ಟಿಗೆ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡುತ್ತಿದ್ದಾರೆ. ದೀಪು ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ನಂಜುಂಡಿನಾಗರಾಜ್, ಸುರೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಸಿ.ಎಂ.ಕೃಷ್ಣಪ್ಪ.
ವಿರಾಟ್ ಹಾಗೂ ಪೂಜಾ ಎಂಬ ನೂತನ ಪ್ರತಿಭೆ ನಾಯಕ, ನಾಯಕಿಯಾಗಿ ನಟಿಸುತ್ತಿರುವ ‘೨೪ ಕ್ಯಾರೆಟ್‘ ಚಿತ್ರದ ತಾರಾಬಳಗದಲ್ಲಿ ರಿಶಿಕುಮಾರ ಸ್ವಾಮೀಜಿ, ರಂಗಾಯಣರಘು, ಶೋಭ್ರಾಜ್, ಸುರೇಶ್ ಮಂಗಳೂರು, ಧನಂಜಯ್, ಸುಧಾಬೆಳವಾಡಿ, ಪೆಟ್ರೋಲ್ ಪ್ರಸನ್ನ, ಕೃಷ್ಣಕುಮಾರ್, ತೇಜಸ್ವಿನಿ, ರಾಕ್ಸತೀಶ್, ದೀಪು, ಜಿ.ಎಸ್.ಬಸವರಾಜ್, ಸಿದ್ನಳ್ಳಿ ವೆಂಕಟೇಶ್, ಸಂಕೇತ್ ಕಾಶಿ ಮುಂತಾದವರಿದ್ದಾರೆ. ರಿಶಿಕುಮಾರ್ ಸ್ವಾಮೀಜಿ ಪುತ್ರಿ ಲಿಖಿತ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಿಶಿಕುಮಾರ್ ಸ್ವಾಮೀಜಿ ಈ ಚಿತ್ರಕ್ಕಾಗಿ ಹಾಡೊಂದನ್ನು ಬರೆದು ತಾವೇ ಹಾಡುತ್ತಿರುವುದು ವಿಶೇಷ. ಬೆಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ, ತೀರ್ಥಹಳ್ಳಿ, ಜೋಗ್ ಮುಂತಾದ ಕಡೆ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.